ಸಮಗಾರ ಹರಳಯ್ಯ, ಮಾದಾರ ಚೆನ್ನಯ್ಯ ಕಾಯಕ ಶರಣರ ಜಯಂತ್ಯೋತ್ಸವ.!
ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ, ಸಮಗಾರ ಹರಳಯ್ಯ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ,ಮತ್ತು ಉರಿಲಿಂಗ ಪೆದ್ದಿ, ಕಾಯಕ ಶರಣರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ಶಾಸಕರಾದ ಶ್ರೀ ಚನ್ನಬಸಪ್ಪ ರವರು ಉದ್ಘಾಟಿಸಿ, ಎಲ್ಲಾ ಕಾಯಕ ಶರಣರ ಜಯಂತಿ ಒಟ್ಟಿಗೆ ಆಚರಣೆ ಮಾಡುವುದು ವಿಶೇಷವೇ ಸರಿ, ಜಗತ್ತಿಗೇ ಕಾಯಕದ ಮಹತ್ವ ಸಾರಿದ ಮಹಾ ಶಕ್ತಿಗಳು ಮತ್ತು ಸದ್ವಿಚಾರಗಳನ್ನು ಸಾರಿದ ಶಕ್ತಿಗಳು ನಮ್ಮ ಕಾಯಕ ಶರಣರು ಎಂದು ನುಡಿದರು.
ನಮ್ಮದು ಶ್ರೇಷ್ಟ ಪರಂಪರೆ ಹೊಂದಿರುವ ದೇಶ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಾಡು. ಎಲ್ಲರೂ ನಮ್ಮವರು ಎನ್ನುವ ದೇಶವಿದ್ದರೆ ಅದು ನಮ್ಮ ಭಾರತ ದೇಶ, ವಸುದೈವ ಕುಟುಂಬಕಂ ಪರಿಕಲ್ಪನೆಯಡಿ ಸಮಾಜವನ್ನು ಕಟ್ಟಿ ಬದುಕುತ್ತಿದ್ದೇವೆ.
ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರೆಲ್ಲ ವೈಚಾರಿಕ ನೆಲಗಟ್ಟಿಗೆ ಸಂಬಂಧಿಸಿದ ಕಾಯಕ ಶರಣರು. ಇವರು ತಮ್ಮ ಕಾಯಕನಿಷ್ಟೆಯಿಂದ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ. ಸಮಾನತೆಯನ್ನು ಸಾರಿದ್ದಾರೆ. ಈ ಐದು ಜನರ ಒಂದೇ ಸಮಷ್ಟಿಯ ನಡವಳಿಕೆಯ ಪರಿಣಾಮ ಒಂದೇ ದಿನ ಜಯಂತಿ ಯನ್ನು ಆಚರಿಸಲಾಗುತ್ತಿದೆ. ಐದು ಜನರದ್ದು ಒಂದೇ ದಿನ ಜಯಂತಿ ಆಚರಣೆಯಾಗುತ್ತಿರುವುದು ಅತ್ಯಂತ ವಿಶೇಷ ಮತ್ತು ನಮ್ಮಲ್ಲಿ ಮಾತ್ರ ಸಾಧ್ಯವಿರಬಹುದು. ಇವರೆಲ್ಲ ಕಾಯಕದ ಮಹತ್ವ ಮತ್ತು ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಸಾರಲು ಪ್ರೇರಕ ಶಕ್ತಿಗಳು, ಪ್ರಸ್ತುತ ಹೊರ ದೇಶದವರು ನಮ್ಮನ್ನು ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೆ ಇಂತಹ ಶ್ರೇಷ್ಟ ವಿಚಾರ ವಂತರು ಎಂದು ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎನ್. ಮಹಾದೇವಸ್ವಾಮಿ ಮಾತನಾಡಿ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ತಮ್ಮ ಕಾಯಕದ ಮೂಲಕ ಜಗದ್ವಿಖ್ಯಾತ ರಾದವರು. ಶಿಸ್ತು, ಬದ್ದತೆಯಿಂದ ತಮ್ಮ ಕಾಯಕ ನಡೆಸಿ ಕೊಂಡು ಇತರರಿಗೆ ಮಾದರಿ ಯಾದವರು.
ಕ್ರಿ.ಪೂ. 6ನೇ ಶತಮಾನದಿಂದ ಭಾರತದಲ್ಲಿ ಬೌದ್ಧ, ಜೈನ ಧರ್ಮಗಳ ಆರಂಭವಾಯಿತು. ಆನಂತರದ ರಾಜಕೀಯ. ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳ ನಡುವೆ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯದಲ್ಲಿ, ಸಮ ಸಮಾಜವನ್ನು ಕಟ್ಟುವಲ್ಲಿ ಬಸವಣ್ಣ ಮತ್ತು ಕಾಯಕ ಶರಣರು ನಿರತರಾಗಿ, ಸಮಾಜಕ್ಕೆ ಅನನ್ಯ ಕೊಡುಗೆಗಳನ್ನು, ವಚನೆ ಸಾಹಿತ್ಯವನ್ನು ನೀಡಿದರು.
ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಮಾತನಾಡಿ, ನಮ್ಮ ನೆಲದ ಮಹಾನ್ ವ್ಯಕ್ತಿಗಳ ತತ್ವ ಸಿದ್ಧಾಂತಗಳನ್ನು ನಾವು ತಿಳಿದು, ಅದನ್ನು ಅಳವಡಿಸಿಕೊಂಡು ನಾಡಿನ ಸರ್ವತೋಮುಖ ಅಭಿವ್ಯದ್ವಿಗೆ ಶ್ರಮಿಸಬೇಕೆಂಬ ಕಳಕಳಿ ಯಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದ್ದು, ನಾವು ಅವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸೋಣ ಎಂದು ಕರೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಕುಂದು ಕೊರತೆ ನಿವಾರಣಾ ಮೇಲ್ಮನವಿ ಪ್ರಾಧಿಕಾರ ಸಮಿತಿ ಜಿಲ್ಲಾ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ, ಜಿಲ್ಲಾ ಸಮಗಾರ ಸಂಘದ ಉಪಾಧ್ಯಕ್ಷ ಗೋವಿಂದ ನಾಯ್ಕ್, ಕಾರ್ಯದರ್ಶಿ ಕೆ.ಎನ್. ಅಶೋಕ್ ಕುಮಾರ್, ಸಹಕಾರ್ಯದರ್ಶಿ ಶಿವಾನಂದ ಹೆಚ್, ಪ್ರಕಾಶ್ ಪಾಲೇಕರ್, ಸಮಗಾರ ಸಮಾಜದ ಪ್ರಮುಖರಾದ ಗೋಪಾಲ ಕದಂ, ಅರ್ಜುನ್ ಸಾಭೋಜಿ, ಮಂಜುನಾಥ್ ಸಾಭೋಜಿ, ನಾಗೇಶ್ ಉಳ್ಳಿಕಾಶಿ, ಭಾಸ್ಕರ್ ನಾಯ್ಕ್, ಡಿ.ಎಸ್.ಎಸ್ ಅಂಬೇಡ್ಕರ್ ವಾದ ಸಂಚಾಲಕ ಹಾಲೇಶಪ್ಪ, ಶಿವಕುಮಾರ್, ಮಂಜುನಾಥ್, ಹಾಗೂ ಇತರರೂ ಉಪಸ್ಥಿತರಿದ್ದರು.